View this in:
English Devanagari Telugu Tamil Kannada Malayalam Gujarati Odia Bengali  |
Marathi Assamese Punjabi Hindi Samskritam Konkani Nepali Sinhala Grantha  |
This document is in ಶುದ್ಧ ಕನ್ನಡ with the right anusvaras marked. View this in ಸರಳ ಕನ್ನಡ, with simplified anusvaras for easier reading.

ಮಧ್ವ ನಾಮ (ಶ್ರೀಪಾದರಾಜ ವಿರಚಿತ)

(ರಾಗ – ಸೌರಾಷ್ಟ್ರ, ಆದಿತಾಳ)

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣ ಸದ್ಧಾಮ ಮಧ್ವನಾಮ ॥ ಪ ॥

ಆವ ಕಚ್ಛಪ ರೂಪದಿನ್ದಲಣ್ಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಳಿವಿಡಿದು ಹರಿಯ ಸುರರೈಯ್ದುವರು
ಆ ವಾಯು ನಮ್ಮ ಕುಲಗುರುರಾಯನು ॥ 1 ॥

ಆವವನು ದೇಹದೊಳಗಿರಲು ಹರಿ ನೆಲಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದಾ ಒಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ॥ 2 ॥

ಕರುಣಾಭಿಮಾನಿ ಸುರರು ದೇಹವ ಬಿಡಲು
ಕುರುಡ ಕಿವುಡ ಮೂಕನೆನ್ದೆನಿಸುವ
ಪರಮ ಮುಖ್ಯ ಪ್ರಾಣ ತೊಲಗಲಾ ದೇಹವನು
ಅರಿತು ಪೆಣನೆನ್ದು ಪೇಳುವರು ಬುಧಜನ ॥ 3 ॥

ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರುಕುಲತಿಲಕ ಮುಖ್ಯ ಪವಮಾನನು ॥ 4 ॥

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆನ್ದು
ವಾತಸುತ ಹನುಮನ್ತನೆನ್ದೆನಿಸಿದ
ಪೋತ ಭಾವದಿ ತರಣಿ ಬಿಮ್ಬಕ್ಕೆ ಲಙ್ಘಿಸಿದ
ಈತಗೆಣೆಯಾರು ಮೂಲೋಕದೊಳಗೆ ॥ 5 ॥

ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿನ್ದುಮುನ್ದಾಗಿ ನಡೆದ
ಪರಮ ಪವಮಾನ ಸುತ ಉದಯಾಸ್ತ ಶೈಲಗಳ
ಭರದಿಯೈದಿದಗೀತಗುಪಮೆ ಉಣ್ಟೇ ॥ 6 ॥

ಅಖಿಲ ವೇದಗಳ ಸಾರ ಪಠಿಸಿದನು ಮುನ್ನಲ್ಲಿ
ನಿಖಿಳ ವ್ಯಾಕರಣಗಳ ಇವ ಪೇಳಿದ
ಮುಖದಲ್ಲಿ ಕಿಞ್ಚಿದಪಶಬ್ದ ಇವಗಿಲ್ಲೆನ್ದು
ಮುಖ್ಯಪ್ರಾಣನನು ರಾಮನನುಕರಿಸಿದ ॥ 7 ॥

ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಳ ಕಣ್ಡು ಧನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಙ್ಕೆಯ ಬನ್ದ ಹನುಮನ್ತನು ॥ 8 ॥

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ
ಮೆರೆದ ಹನುಮನ್ತ ಬಲವನ್ತ ಧೀರ ॥ 9 ॥

ಉರಗಬನ್ಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿಕುಲತಿಲಕನಾಜ್ಞೆಯ ತಾಳಿದ
ಗಿರಿಸಹಿತ ಸಞ್ಜೀವನವ ಕಿತ್ತು ತನ್ದಿತ್ತ
ಹರಿವರಗೆ ಸರಿಯುಣ್ಟೆ ಹನುಮನ್ತಗೆ ॥ 10 ॥

ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡೆವೆನೆನೆ ಹನುಮನ್ತ
ನಿಜ ಭಕುತಿಯನೆ ಬೇಡಿ ವರವ ಪಡೆದ ॥ 11 ॥

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು ॥ 12 ॥

ಕರದಿನ್ದ ಶಿಶುಭಾವನಾದ ಭೀಮನ ಬಿಡಲು
ಗಿರವಡಿದು ಶತಶೃಙ್ಗವೆನ್ದೆನಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೆವ ವೀರರಿಗೆ ಸುರ ನರರು ಸರಿಯೇ ॥ 13 ॥

ಕುರುಪ ಗರಳವನಿಕ್ಕೆ ನೆರೆ ಉಣ್ಡು ತೇಗಿ
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ॥ 14 ॥

ಅಲ್ಲಿರ್ದ ಬಕ ಹಿಡಿಮ್ಬಕರೆಮ್ಬ ರಕ್ಕಸರ
ನಿಲ್ಲದೊರಸಿದ ಲೋಕಕಣ್ಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ॥ 15 ॥

ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆನ್ದು
ಮೂಜಗವರಿಯೆ ಕಙ್ಕಣ ಕಟ್ಟಿದ ॥ 16 ॥

ದಾನವರ ಸವರಬೇಕೆನ್ದು ಬ್ಯಾಗ
ಮಾನನಿಧಿ ದ್ರೌಪದಿಯ ಮನದಿಙ್ಗಿತವನರಿತು
ಕಾನನವ ಪೊಕ್ಕು ಕಿಮ್ಮಾರಾದಿಗಳ ಮುರಿದು
ಮಾನಿನಿಗೆ ಸೌಗನ್ಧಿಕವನೆ ತನ್ದ ॥ 17 ॥

ದುರುಳ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ
ಮರುಳಾಗಿ ಕರಕರಿಯ ಮಾಡಲವನಾ
ಗರಡಿ ಮನೆಯಲಿ ಬರಸಿ ಅವನನ್ವಯವ
ಕುರುಪನಟ್ಟಿದ ಮಲ್ಲಕುಲವ ಸದೆದ ॥ 18 ॥

ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರನ್ತೆ ಕೌರವನ ಮುರಿದು ಮೆರೆದ
ವೈರಿ ದುಶ್ಶಾಸನ್ನ ರಣದಲ್ಲಿ ಎಡಗೆಡಹಿ
ವೀರ ನರಹರಿಯ ಲೀಲೆಯ ತೋರಿದ ॥ 19 ॥

ಗುರುಸುತನು ಸಙ್ಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಙ್ಕಾರದಿಂ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ॥ 20 ॥

ಚಣ್ಡ ವಿಕ್ರಮನು ಗದೆಗೊಣ್ಡು ರಣದಿ ಭೂ
ಮಣ್ಡಲದೊಳಿದಿರಾನ್ತ ಖಳರನೆಲ್ಲಾ
ಹಿಣ್ಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಣ್ಡು ನಿಲ್ಲುವರಾರು ತ್ರಿಭುವನದೊಳು ॥ 21 ॥

ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆನ್ದೆನಿಸಿದ ॥ 22 ॥

ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ತ್ವಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ ॥ 23 ॥

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಮ್ಬ
ದುರ್ವಾದಿಗಳ ಮತವ ನೆರೆ ಖಣ್ಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆನ್ದರುಹಿದಾ
ಶರ್ವಾದಿ ಗೀರ್ವಾಣ ಸನ್ತತಿಯಲಿ ॥ 24 ॥

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳ ವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಯೈದಿದ ಮಧ್ವಮುನಿರಾಯಗಭಿವನ್ದಿಪೆ ॥ 25 ॥

ಜಯ ಜಯತು ದುರ್ವಾದಿಮತತಿಮಿರ ಮಾರ್ತಾ0ಡ
ಜಯಜಯತು ವಾದಿಗಜಪಞ್ಚಾನನ
ಜಯಜಯತು ಚಾರ್ವಾಕಗರ್ವಪರ್ವತಕುಲಿಶ
ಜಯಜಯತು ಜಗನ್ನಾಥ ಮಧ್ವನಾಥ ॥ 26 ॥

ತುಙ್ಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ
ಭಙ್ಗವಿಲ್ಲದೆ ಸುಖವ ಸುಜನಕೆಲ್ಲ
ಹಿಙ್ಗದೆ ಕೊಡುವ ನಮ್ಮ ಮಧ್ವಾನ್ತರಾತ್ಮಕ
ರಙ್ಗವಿಠಲನೆನ್ದು ನೆರೆ ಸಾರಿರೈ ॥ 27 ॥

ಫಲಶ್ರುತಿ (ಜಗನ್ನಾಥದಾಸ ವಿರಚಿತ)

ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀಮುಕುನ್ದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ ॥ 1 ॥

ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಳು ಕೆಡುವರಪಮೃತ್ಯು ಬರಲಞ್ಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ॥ 2 ॥

ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ
ತಾಪಕಳೆದಖಿಲ ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿನ್ದ ಕಡೆ ಹಾಯಿಸುವುದು ॥ 3 ॥




Browse Related Categories: